ರೈತರ ಕಲ್ಯಾಣಕ್ಕಾಗಿ ನರೇಂದ್ರ ಮೋದಿ ಸರ್ಕಾರ ರಸಗೊಬ್ಬರಕ್ಕೆ ಬರೋಬ್ಬರಿ 38 ಸಾವಿರ ಕೋಟಿ ರೂ ಗಳನ್ನು ಸಹಾಯ ಧನವಾಗಿ ನೀಡಲು ಕೇಂದ್ರ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ ಎಂದು ರಾಜ್ಯ ಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಾವಡಿ ತಿಳಿಸಿದ್ದಾರೆ.
ಇದರಿಂದ 2023-24 ನೇ ಸಾಲಿನಲ್ಲಿ ರಸಗೊಬ್ಬರದ ಸಹಾಯಧನ 1.08 ಲಕ್ಷ ಕೋಟಿ ರೂ ಗೆ ಏರಿಕೆಯಾಗಲಿದೆ, ಈ ಸಹಾಯಧನದಿಂದ 12 ಕೋಟಿ ರೈತರು ಪ್ರಯೋಜನ ಪಡೆಯಲಿದ್ದಾರೆ. ಕೇಂದ್ರ ಸರ್ಕಾರ ಯೂರಿಯಾ ರಸಗೊಬ್ಬರ ಸಹಾಯಧನಕ್ಕಾಗಿ 2023 – 24 ರ ಬಜೆಟ್ನಲ್ಲಿ 70 ಸಾವಿರ ಕೋಟಿ ರೂ ಗಳನ್ನು ಘೋಷಣೆ ಮಾಡಿದೆ, ಇದೀಗ ಹೆಚ್ಚುವಾರಿಯಾಗಿ 38 ಸಾವಿರ ಕೋಟಿ ರೂ ಸಹಾಯಧನ ಘೋಷಣೆ ಮಾಡಿದೆ, ಪ್ರಸ್ತುತ ಯೂರಿಯಾ ಬೆಲೆ 276 ಇದ್ದು ಡಿಎಪಿ ಗೆ 1350 ರೂ ಇದ್ದು ಈ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ, ಮತ್ತು ನೈಟ್ರೋಜನ್ ಗೆ ಪ್ರತಿ ಕೆಜಿ ಗೆ 76 ರೂ, ಫಾಸ್ಪೇಟ್ ಗೆ 41 ರೂ, ಪೊಟ್ಯಾಶ್ 15 ರೂ, ಸಲ್ಫರ್ 2.8 ರೂ ಸಹಾಯಧನ ನೀಡಲಾಗುತ್ತದೆ ಎಂದು ಹೇಳಿದರು.
ಈಗಾಗಲೇ ಕೇಂದ್ರ ಸರ್ಕಾರ ‘ಒಂದು ದೇಶ ಒಂದು ಗೊಬ್ಬರ’ ಯೋಜನೆಯಡಿ ಭಾರತವು ರಸಗೊಬ್ಬರ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುತ್ತಿದೆ, ರೈತರಿಗೆ ಅಗ್ಗದ ಮುತ್ತು ಗುಣಮಟ್ಟದ ಪೋಷಕಾಂಶಗಳ ಯೂರಿಯಾ ಉತ್ಪಾದನೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ.
ದೇಶದ ರೈತರ ಏಳಿಗೆಗಾಗಿ ಸದಾ ಶ್ರಮಿಸುತ್ತಿರುವ ನರೇಂದ್ರ ಮೋದಿಯವರನ್ನು ರೈತರು ಹಾಗೂ ರೈತ ಸಂಘದವರು ಅಭಿನಂದನೆ ಹೇಳಿದ್ದಾರೆ .